ಈಗ ಕರ್ನಾಟಕದಲ್ಲಿ ನಡೀತಿರೋ ರಾಜಕೀಯ ಬೆಳವಣಿಗೆಗಳನ್ನ ಕಂಡರೆ ಒಂದು ರೀತಿಯ ಭಯ, ಆತಂಕ ಕಾಡ್ತದೆ. ದೇಶದ ಬಗ್ಗೆ ಭವಿಷ್ಯದ ಬಗ್ಗೆ ನಾವೆಷ್ಟೇ ನಿರ್ಲಿಪ್ತರಾಗಿದ್ದರೂ ಮನದ ಯಾವುದೋ ಮೂಲೆಯಲ್ಲಿ ಸಣ್ಣದೊಂದು ದೇಶದ ಬಗ್ಗೆ ಆಸಕ್ತಿ (ಹಂಬಲ) ಅನ್ನೋದು ಇರುತ್ತಲ್ವ. ಹಾಗಾಗಿ ನಮ್ಮ ರಾಜ್ಯದಲ್ಲಿ ನಡೀತಿರೋ ಪೊಲಿಟಿಕಲ್ ಡೆವಲಪ್ಮೆಂಟ್ಸ್ ಬಗ್ಗೆ ಯೋಚಿಸಿದಾಗ ಆತಂಕ ಕಾಡುತ್ತೆ.
ರಾಜಕೀಯ ಅಂದ್ರೇನೇ ರಾಡಿ ಅಂತ ಎಷ್ಟೇ ಸಮಾಧಾವ ಪಟ್ಕೊಂಡ್ರೂ ತೀರಾ ಇಷ್ಟು ಕೊಳೆತು ನಾರುವುದನ್ನ ಸಹಿಸೋದು ಅಂದ್ರೆ ಒಂಥರಾ ಕಸಿವಿಸಿ ಅಲ್ವಾ... ದೇವೇಗೌಡರು ಒಂಥರಾ ರಾಜಕೀಯಕ್ಕೆ ನಾಂದಿ ಹಾಡಿದರೆ ಈ ಬಿಜೆಪಿಯವರದು ಅವರನ್ನೂ ಮೀರಿದ ತಂತ್ರ ಅಂತ ಅನ್ಸುತ್ತೆ. ಪ್ರಜಾಪ್ರಭುತ್ವದ ರಕ್ಷಣೆಯ ಹೆಸರಿನಲ್ಲಿ ಏನೇನೆಲ್ಲಾ ಕಾನೂನು ಮಾಡಿದರೂ ಅದರ ಅಡಿಯಲ್ಲಿ ನುಸುಳುವ ಮಾರ್ಗವನ್ನು ರಾಜಕಾರಣಿಗಳು ಕಂಡುಕೊಳ್ಳುತ್ತಾರೆ ಎಂಬುದಕ್ಕೆ ನಮ್ಮ ರಾಜ್ಯದ ಬಿಜೆಪಿ ಮಾದರಿಯಾಗಿದೆ. ಪಕ್ಷಾಂತರಕ್ಕೆ ಹೊಚ್ಚ ಹೊಸತೊಂದು ಭಾಷ್ಯ ಬರೆದಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಯಾವ ಯಾವ ಕುರೂಪ ಪಡೆದುಕೊಳ್ಳಬಹುದು... ಪ್ರಜಾಪ್ರಭುತ್ವದ ಮೂಲ ತಳಪಾಯಕ್ಕೇ ಸಿಡಿಮದ್ದಿಟ್ಟು ಉಡಾಯಿಸಬಹುದು ಎಂಬುದನ್ನ ನೆನೆಸಿಕೊಂಡರೆ ಹೃದಯ ಕಂಪಿಸುತ್ತದೆ ಅಲ್ವಾ..
ಇದುವರೆಗೆ ಚುನಾವಣೆ ಹಣದ ಬಲದಿಂದಲೇ ನಡೆಯುತ್ತಿದೆ ಎಂದು ಗೊತ್ತಿದ್ದರೂ... ಮತದಾರರನ್ನೂ ಸೇರಿಸಿ ಎಲ್ಲವನ್ನೂ ಹಣವೇ ನಿರ್ವಹಿಸುವ ಮಟ್ಟಕ್ಕೆ ಇಳಿದಿರಲಿಲ್ಲ. ಕಳೆದ ಕರ್ನಾಟಕದ ವಿಧಾನ ಸಭಾ ಚುನಾವಣೆ ಅದಕ್ಕೂ ಮುನ್ನುಡಿ ಬರೆಯಿತು. ದುಡ್ಡೊಂದನ್ನು ಹೊರತು ಪಡಿಸಿ ಎಲ್ಲವೂ ಸ್ತಬ್ಥಗೊಂಡಿತ್ತೇನೋ ಎಂಬಷ್ಟರ ಮಟ್ಟಿಗೆ ಹಣದ ಪೆಡಂಭೂತ ಕೇಕೆ ಹಾಕಿ ಕುಣಿದಾಡಿತ್ತು. ಗಣಿಯ ಹಣ ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿ ಎನಿಸಿದ ಜನಾದೇಶದ ಮೂಲ ಅಸ್ತಿತ್ವವನ್ನೇ ಅಣಕಿಸುವಂತಿತ್ತು. ಮತ ಪಾವಿತ್ರ್ಯತೆಗೆ ಅಪಚಾರ ಎಸಗಿತ್ತು.
ಇನ್ನು ಮುಂದೆ ಅದರ ರೌದ್ರತೆ ಮತ್ತಷ್ಟು ಹೆಚ್ಚಾಗುವ ಎಲ್ಲ ಲಕ್ಷಣಗಳೂ ಈಗಲೇ ಗೋಚರಿಸುತ್ತಿವೆ. ಆಯ್ಕೆಗೊಂಡು ಒಂದೂವರೆ ತಿಂಗಳಲ್ಲೇ ಜನಾದೇಶವನ್ನು ಕಾಲ ಕಸಕ್ಕಿಂತಲೂ ಕೀಳಾಗಿಸಿ ಪುನಃ ಆಯ್ಕೆಗಾಗಿ ಮತ ಭಿಕ್ಷೆಗೆ ತೆರಳುತ್ತಾರೆ. ಆ ಸಂದರ್ಭದಲ್ಲಿ ಈ ವಿಶೇಷ ಪಕ್ಷಾಂತರಿಗಳಿಗೆ ಬೇಕಿರುವುದು ಪ್ರಜ್ಞಾವಂತರ ಮತಗಳಲ್ಲ. ಹಣಕ್ಕಾಗಿ ಮತ ಮಾರಿಕೊಳ್ಳುವವರ ದುರ್ಬಲ ಮತಗಳು. ಎಷ್ಟೇ ಜಾಗೃತಿ ಮೂಡಿಸುವ ಕಾರ್ಯವಾದರೂ ಮತ ಬಿಕರಿಗೇನೂ ನಮ್ಮಲ್ಲಿ ಕೊರತೆ ಇಲ್ಲವಲ್ಲ ಎಂಬುದೇ ಇವರ ಧೈರ್ಯ. ಹೇಗೂ ಕಳೆದ ಚುನಾವಣೆಯಲ್ಲಿ ಗಣಿ ಹಣ ಸುರಿದು ಮತಗಳನ್ನು ಬಾಚಿ ಗುಡ್ಡೆ ಹಾಕಿಕೊಂಡ ಅನುಭವವಿದೆಯಲ್ಲ!
ಇದು ಒಂದು ರೀತಿಯ ವಿಷ ವರ್ತುಲದಂತೆ ವಿಸ್ತಾರಗೊಳ್ಳುತ್ತ ಸಾಗುವ ಅಪಾಯದ ಎಲ್ಲ ಮುನ್ಸೂಚನೆಗಳೂ ಗೋಚರಿಸುತ್ತಿವೆ. ಇದಕ್ಕೆ ಪರಿಹಾರ ಅಷ್ಟು ಸುಲಭ ಅಲ್ಲ. ಅದಕ್ಕಾಗಿ ವಿಶೇಷ ಕಾನೂನನ್ನೇ ರೂಪಿಸುವ ಅನಿವಾರ್ಯತೆ ಇದೆ. ಅಥವಾ ಈಗಿರುವ ಪಕ್ಷಾಂತರ ನಿಷೇಧ ಕಾಯಿದೆಗೆ ತಿದ್ದುಪಡಿ ತಂದು ಮತ್ತಷ್ಟು ಬಲಪಡಿಸಬೇಕಿದೆ. ಈಗಿನಂತೆ ರಾಜಕೀಯಕ ಕಾರಣಗಳಿಗಾಗಿ ಅಭಿವೃದ್ಧಿಯ ಹೆಸರಿನಲ್ಲಿ ವಿನಾಕಾರಣ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿದವರಿಗೆ ಪುನಃ ಎರಡು ಟೆರ್ಮ್ ಗಳಿಗೆ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರುವ ಕಾನೂನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಯಬೇಕಿದೆ. ಹೀಗಾದಲ್ಲಿ ಜನಾದೇಶಕ್ಕೆ ಹಾಗೂ ಪ್ರತಿ ಮತಕ್ಕೂ ಒಂದು ಮೌಲ್ಯ ತಂದು ಕೊಡುವುದು ಸಾಧ್ಯವೇನೋ..?
ಒಟ್ಟಿನಲ್ಲಿ ಪಕ್ಷಾಂತರ ನಿಷೇಧ ಕಾಯಿದೆಯನ್ನು ಬಿಗಿಗೊಳಿಸಿ ಜಾರಿಗೆ ತಂದ ಬಿಜೆಪಿ ಪಕ್ಷದಿಂದಲೇ ಅದರ ಅಣಕ ನಡೆದಿರುವುದು ವಿಪರ್ಯಾಸ!
- ಕರಣಂ ರಮೇಶ್
krnmsrk@gmail.com
Thursday, July 10, 2008
Monday, March 12, 2007
Subscribe to:
Posts (Atom)